Monday, October 8, 2012

ಸ್ತಪತಿ ಮತ್ತು ಶಾಂತ ಬುದ್ದನ ವಿಗ್ರಹ

ಈ ಕತೆ ಎಲ್ಲೋ ಓದಿದ್ದು ಅಲ್ಲ ಯಾರು ಬರೆದದ್ದು ಅಲ್ಲ..ಹೀಗೆ ಆಲೋಚನೆಯಲ್ಲಿದ್ದಾಗ ಬಂದದ್ದು. ಇದರ ಚಿತ್ರಣ ಸುಮಾರು 600-800 ವರ್ಷಗಳೆಂದುಕೊಳ್ಳಬಹುದು.

ಒಂದು ಊರಿನಲ್ಲಿ ಒಬ್ಬ ಬಹಳ ಒಳ್ಳೆಯ ಸ್ತಪತಿಯೋಬ್ಬನಿದನು, ಅವನ ಕೆತ್ತನೆಯ ಕೆಲಸ ಬಹಳ ಸುಪ್ರಸಿದ್ದವಗಿದ್ದು ಅವನಿಗೆ ಬಹಳ ಬೇಡಿಕೆಯು ಇತ್ತು. ಹಾಗಾಗಿ ರಾಜನೊಬ್ಬನ ಆಜ್ಞೆಯಂತೆ ಒಂದು ಬುದ್ದನ ವಿಹಾರ ಕಟ್ಟುವ ಅವಕಾಶ ಇವನಿಗೆ ಒದಗಿ ಬಂತು. ಇವನಿಗೆ ರಾಜನು ಎಲ್ಲ ರೀತಿಯ ಸಹಾಯ ಸಲಕರಣೆಗಳನ್ನು ಒದಗಿಸಿ ಈ ಮಾದರಿಯ ವಿಹಾರ ಎಲ್ಲೂ ಇರಬಾರದು ಆ ರೀತಿಯಲ್ಲಿ ಕಟ್ಟಬೇಕೆಂದು ಹೇಳಿದನು. ಅಂತೆಯೇ ಸ್ತಪತಿಯು ಬಹಳ ಚಾಕಚಕ್ಯತೆಯಿಂದ ವಿಹಾರವನ್ನು ಕಟ್ಟತೊಡಗಿದನು.
ಈ ನಡುವೆ ಸಂಸಾರದಲ್ಲಿ ಏನೋ ವಿಪರೀತವಾಗಿ ತನ್ನ ತಾಯಿಯನ್ನು ಮತ್ತು ಕುಟುಂಬದವರನ್ನು ದೂಷಿಸಿ ಸ್ತಪತಿಯು ಮನೆಯಿಂದ ಹೊರನಡೆದನು.

ಇತ್ತ ವಿಹಾರದ ಎಲ್ಲ ಕೆಲಸಗಳು ಮುಗಿದು ಪ್ರಾಂಗಣದ ಬುದ್ದನ ಮೂರ್ತಿಯ ಕೆತ್ತನೆ ಕಾರ್ಯ ನಡೆಯತೊಡಗಿತು, ಸ್ತಪತಿಯು ಈ ಕಾರ್ಯವನ್ನು ಕೈಗೆತ್ತಿಕೊಂಡು ಎಷ್ಟೇ ತದೇಕಚಿತ್ತದಿಂದ ಮಾಡಿದರು ಬುದ್ದನ ಆ ಮಂದಸ್ಮಿತ ನಗೆಯನ್ನು ಮೂಡಿಸುವಲ್ಲಿ ವಿಫಲನಾಗುತ್ತಿದ್ದ. ಈ ವಿಷಯ ರಾಜನಿಗೂ ತಿಳಿದು ಸ್ತಪತಿಯ ಈ ವರ್ತನೆಯನ್ನು ಬೇಸರದಿಂದ ಮಂತ್ರಿಯಲ್ಲಿ ದೂರಿ  ಇದರ ಗಮನ ಹರಿಸುವಂತೆ ಹೇಳಿದ. ಸ್ತಪತಿಯ ಕಾರ್ಯವೈಖರಿಯನ್ನು ಹಿಂದೆ ಗಮನಿಸಿದ್ದ ಮಂತ್ರಿಯು ಈಗಿನ ಅವನ ಸ್ತಿತಿಯನ್ನು ಇತರರಿಂದ ಅವನ ಕೊರತೆಯನ್ನು ಕಂಡುಕೊಂಡನು.

ಒಮ್ಮೆ ಮಂತ್ರಿಯು ಅವನ ಬಳಿ ಬಂದು "ನೀನು ಬುದ್ದನ ವಿಗ್ರಹದಲ್ಲಿ ಮಂದಸ್ಮಿತ ಮೂಡಿಸಲು ಬಹಳವಾಗಿ ಶ್ರಮಿಸುತ್ತಿದ್ದೆಯಾ, ಆದರೆ ಆ ಮಂದಸ್ಮಿತ ನಿನ್ನಲ್ಲೇ ಇಲ್ಲ, ಆ ಮಂದಸ್ಮಿತ ನಿನ್ನಲ್ಲಿ ಮೂಡದಹೊರತು ಆ ಬುದ್ದನಲ್ಲಿ ಮೂಡುವುದಿಲ್ಲ ಎಂದನು."
ಈ ಮಾತು ಕೇಳಿದೊಡನೆಯೇ ಸ್ತಪತಿಯ ಕಣ್ಣುಗಳು ತೆರೆದಂತಾದವು, ಕೂಡಲೇ ಎದ್ದು ಮಂತ್ರಿಗೆ ತನ್ನ ಮನಸ್ತಿತಿಯನ್ನು ವಿವರಿಸಿ ಹೇಳಿದನು. ಇದ ಕೇಳಿದ ಮಂತ್ರಿಯು ಅವನನ್ನು ಕೂಡಲೇ ತನ್ನ ತಾಯಿ  ಹಾಗು ಕುಟುಂಬದವರನ್ನು ಭೇಟಿಮಾಡಿ ಬರಲು ಹೇಳಿದನು.ಕೆಲವು ದಿನಗಳ ತರುವಾಯ ಮರಳಿದ ಸ್ತಪತಿಯು ತನ್ನ ಸಂತೋಷವನ್ನು ಮಂತ್ರಿ ಹಾಗು ಇತರರೊಡನೆ ಹಂಚಿಕೊಂಡು ಉಲ್ಲಾಸದಿಂದಿದ್ದನು.

ಕೆಲವು ದಿವಸಗಳ ಪರಿಶ್ರಮದ ನಂತರ ಮಂದಸ್ಮಿತ ಶಾಂತ ಬುದ್ದನ ಮೂರ್ತಿಯು ರೂಪುತಳೆಯಿತು.

No comments: