Saturday, September 20, 2008

Karnatakada Bagge..

ನಮ್ಮ ಕರ್ನಾಟಕ ರಾಜ್ಯದ ನಿನ್ನೆಗಳನ್ನು ತಿಳಿಯದೇ, ಇಂದು ನಾವು ನಾಳಿನ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ. ನಿನ್ನೆಯ ಇತಿಹಾಸ, ನಮ್ಮ ಹಿರಿಯರ ಸಾಧನೆಗಳನ್ನು ಪರಿಚಯಿಸಿದರೆ ನಮ್ಮಲ್ಲಿ ಸ್ಪೂರ್ತಿ ತುಂಬುತ್ತದೆ. ನಮ್ಮ ಮೈಗಳಲ್ಲಿ ಹರಿಯುತ್ತಿರುವ ರಕ್ತ ಕೆಂಪು ನೀರಲ್ಲ, ಅದು ಸಾಮ್ರಾಜ್ಯಗಳನ್ನು ಕಟ್ಟಿದ, ರಕ್ಷಿಸಿದ, ವೈಭವಯುಗಕ್ಕೆ ಕಾರಣವಾದ ಹೆಮ್ಮೆಯ ಅಮೃತವಾಹಿನಿ ಎಂಬ ಅರಿವುಂಟು ಮಾಡುತ್ತದೆ.

ಹಿಂದೆ, ಅಂದರೆ ಕ್ರಿ.ಶ. ೩ನೇ ಶತಮಾನದ ಸುಮಾರಿಗೆ ಶಿವಮೊಗ್ಗ ಸಮೀಪದ ಸೊರಬ ಬಳಿಯ ತಾಳಗುಂದವೆಂಬ ಹಳ್ಳಿಯ ಒಬ್ಬ ಯುವಕ, ಅಂದಿನ ಪಲ್ಲವ ರಾಜಧಾನಿ ಕಂಚಿಗೆ ವಿದ್ಯೆ ಕಲಿಯಲು ಹೋದನಂತೆ. ಅವರಿಂದ ಅಪಮಾನಿತನಾದ ಆ ಕನ್ನಡಿಗ , ಶಸ್ತ್ರದೀಕ್ಷೆ ತೆಗೆದುಕೊಂಡು, ಸೈನ್ಯ ಕಟ್ಟಿ ತಮಿಳು ಪಲ್ಲವರನ್ನು ತನ್ನ ತಾಯ್ನಾಡಿನಿಂದ ಬಡಿದಟ್ಟಿದನಂತೆ. ಅವನೇ ಪಲ್ಲವರ ಸೊಕ್ಕು ಮುರಿದ ಕನ್ನಡದ ಹೆಮ್ಮೆಯ ಮೊಟ್ಟ ಮೊದಲ ರಾಜ. . . ಕದಂಬ ವಂಶ ಸ್ಥಾಪಕ. . . ಮಯೂರವರ್ಮ. ಶ್ರೀಶೈಲದ ಅರಣ್ಯಗಳಲ್ಲಿ ಸೈನ್ಯ ಸಂಘಟಿಸಿ ಪ್ರಜಾಪ್ರೀತಿಗಳಿಸಿ ಪಲ್ಲವರನ್ನು ಮಣ್ಣು ಮುಕ್ಕಿಸಿದ ಧೀರ ನಮ್ಮ ಮುಯೂರ.
ಕನ್ನಡದ ಮೊದಲ ರಾಜ ಮಯೂರನಾದರೂ, ಕನ್ನಡಿಗರ ಕರ್ನಾಟಕ ರತ್ನ ಸಿಂಹಾಸನವನ್ನು ಪ್ರತಿಷ್ಠಾಪಿಸಿದವರು ಬಾದಾಮಿಯ ಚಾಲುಕ್ಯರು. ತಮಿಳು ಪಲ್ಲವರಿಗೂ ಕನ್ನಡಿಗ ಚಾಲುಕ್ಯರಿಗೂ ದಕ್ಷಿಣ ಭಾರತದ ಮೇಲಿನ ಸಾರ್ವಭೌಮತ್ವಕ್ಕಾಗಿ ಇತಿಹಾಸದುದ್ದಕ್ಕೂ ಘನಘೋರ ಸಂಗ್ರಾಮಗಳು ನಡೆದವು. ಇಂತಹ ಚಾಲುಕ್ಯ ವಂಶದ ಪ್ರಮುಖ ದೊರೆ ಇಮ್ಮಡಿ ಪುಲಿಕೇಶಿ. ಇವನ ಕಾಲದಲ್ಲಿ ಉತ್ತರ ಭಾರತವನ್ನು ಹರ್ಷವರ್ಧನವೆಂಬ ಸಾರ್ವಭೌಮ, ಇಂದಿನ ಉತ್ತರಪ್ರದೇಶದಲ್ಲಿರುವ ಕನೋಜಿನಿಂದ ಆಳುತ್ತಿದ್ದನು. ಅವನು ಪರಾಕ್ರಮಿ, ಉತ್ತರಾಪಥೇಶ್ವರನೆಂಬ ಬಿರುದಾಂಕಿತ. ಇವನು ಪುಲಿಕೇಶಿಯನ್ನು ಜಯಿಸಿ ಇಡೀ ಭಾರತವನ್ನು ಆಳಬೇಕೆಂಬ ಬಯಕೆಯಿಂದ ದಕ್ಷಿಣದೆಡೆಗೆ ತನ್ನ ಭಾರಿ ಸೈನ್ಯದೊಂದಿಗೆ ಯುದ್ದಕ್ಕೆ ಬಂದವನು. ನರ್ಮದಾ ನದಿಯ ತೀರದಲ್ಲಿಯೇ ಪುಲಿಕೇಶಿಯ ಸೈನ್ಯ ಅವನನ್ನು ಸೋಲಿಸಿತು. ಸೋತ ಹರ್ಷವರ್ಧನ ಕನ್ನಡಿಗ ಪುಲಿಕೇಶಿಗೆ ಕಪ್ಪ ಕಾಣಿಕೆಗಳನ್ನು ಕೊಟ್ಟನಂತೆ. ಆಗ ಪುಲಿಕೇಶಿಯ ಸೈನ್ಯದಲ್ಲಿ ಆನೆಗಳೇ ೬೦,೦೦೦ದಷ್ಟಿದ್ದವಂತೆ. ಕನ್ನಡಿಗರ ಪಡೆಯನ್ನು ಅಂದು ರಾಕ್ಷಸಪಡೆ, ಯಾರಿಂದಲೂ ಜಯಿಸಲಾಗದ ಸೈನ್ಯವೆಂದು ಕರೆಯುತ್ತಿದ್ದರಂತೆ . ಹೀಗೆ ಹರ್ಷನನ್ನು ಸೋಲಿಸಿ ಪುಲಿಕೇಶಿಯು ಪರಮೇಶ್ವರ ಎಂಬ ಬಿರುದನ್ನು ಪಡೆದನಂತೆ. ಅಂದಿನಿಂದಲೇ ಉತ್ತರ ಭಾರತದ ಇತಿಹಾಸ ಮುಕ್ಕಾಗಿ ಹೋಯ್ತು. ದಕ್ಷಿಣದಲ್ಲಿ ಪುಲಿಕೇಶಿ ಕಂಚಿಯವರೆಗೂ ದಂಡೆತ್ತಿ ಹೋಗಿ ತಮಿಳು ಪಲ್ಲವರನ್ನು ಮಣ್ಣು ಮುಕ್ಕಿಸಿದ್ದ. ನಂತರದಲ್ಲಿ ರಾಷ್ಟ್ರಕೂಟ ದೊರೆಗಳು ಮಳಖೇಡದಿಂದ ಆಳತೊಡಗಿದರು.
ಕರ್ನಾಟಕ ರತ್ನಸಿಂಹಾಸನ ಸ್ಥಾಪಕರು ಚಾಲುಕ್ಯರಾದರೆ, ಅದನ್ನು ವೈಭವವಾಗಿ ಆಳಿದವರು ರಾಷ್ಟ್ರಕೂಟರು. ಇವರಲ್ಲೊಬ್ಬ ದೊರೆ ಮೂರನೇ ಗೋವಿಂದ. ಇವನ ಆಳ್ವಿಕೆಯಲ್ಲಿ ಕನ್ನಡಿಗರ ಶೌಯ೯ ಸಾಹಸಗಳು ಇಡೀ ಭರತ ಖಂಡದಲ್ಲೇ ಮನೆ ಮಾತಾಗಿದ್ದು ದಕ್ಷಿಣದ ಶ್ರೀಲಂಕಾದಿಂದ ಉತ್ತರದ ಹಿಮಾಲಯದ ತುದಿಯವರೆಗೆ: ಪೂರ್ವದ ವಾರಾಣಾಸಿಯಿಂದ ಪಶ್ಚಿಮದಲ್ಲಿ ಗುಜರಾತಿನ ಭುರ್ಜದವರೆಗೆ, ಕನ್ನಡಿಗರ ಸಾಮ್ರಾಜ್ಯ ಹಬ್ಬಿತ್ತು. ಇಂತಹ ಪ್ರತಾಪಶಾಲಿ ಗೋವಿಂದನ ಮಗನ ಹೆಸರು ಶರ್ವ. ಇವನೇ ನಮ್ಮ ಮೆಚ್ಚಿನ ಅಮೋಘವರ್ಷ ನೃಪತುಂಗ. ೧೬ನೇ ವಯಸ್ಸಿನಲ್ಲೇ ಪಟ್ಟಕ್ಕೇರಿದ ಇವನ ಕಾಲ ಕನ್ನಡಿಗರ ಇತಿಹಾಸದ ಒಂದು ಸುವರ್ಣಯುಗ. ಇವನ ಆಳ್ವಿಕೆಯಲ್ಲಿ ಒಮ್ಮೆ ಬರಗಾಲ ಬಂದಾಗ, ಕೊಲ್ಲೂರು ಮೂಕಾಂಬಿಕೆಗೆ ತನ್ನ ಬೆರಳನ್ನು ಬಲಿಕೊಟ್ಟ ಜನಪ್ರೇಮಿ ರಾಜ ಈತ. ರಾಜದ್ರೋಹಕ್ಕಾಗಿ ತನ್ನ ಸ್ವಂತ ಮಗನಿಗೇ ಮರಣದಂಡನೆ ವಿಧಿಸಿದಂತಹ ನಿಷ್ಪಕ್ಷಪಾತ ಧೋರಣೆ ಇವನದ್ದು.

ಗೆಳೆಯರೇ, ಹುಲಿ ಕೊಂದ ಧೀರನ ಕಥೆ ನಿಮಗೆಲ್ಲಾ ಗೊತ್ತಲ್ಲವೇ? ಗುರುಕುಲದಲ್ಲಿ ಪಾಠ ಕೇಳುವಾಗ ನುಗ್ಗಿದ ಹುಲಿಯನ್ನು ಏಕಾಂಗಿಯಾಗಿ ಹೋರಾಡಿ ಕೊಂದ ಸಳ ಹೊಯ್ಸಳ ವಂಶದ ಸ್ಥಾಪಕ, ಇವನ ಶೌಯ೯ದ ಪ್ರತೀಕವೇ ಹೊಯ್ಸಳ ರಾಜಲಾಂಛನ. ಇಂತಹ ಹೊಯ್ಸಳರು ಹಳೇಬೀಡಿನಿಂದ ಆಳುತ್ತಿದ್ದರು. ಇವರ ಪ್ರಮುಖ ದೊರೆ ವಿಷ್ಣುವರ್ಧನ. ಇವನು ಇಡೀ ದಕ್ಷಿಣ ಭಾರತದ ಮೇಲೆ ತನ್ನ ಅಧಿಪತ್ಯ ಸಾಧಿಸಿದ್ದನು. ಇಂತಹ ಹೊಯ್ಸಳರ ಕಾಲದಲ್ಲೇ ಗರುಡರೆಂಬ ಸಂಸ್ಕೃತಿ ನಮ್ಮಲ್ಲಿತ್ತು. ಗರುಡರೆಂದರೆ , ರಾಜನಿಗಾಗಿ ಜೀವಿಸುವ ನಿಷ್ಠಾವಂತ ಜನರೆಂದು. ಇವರು ಹೊಯ್ಸಳ ರಾಜನಿಗೆ ನಿಷ್ಠರಾಗಿದ್ದು, ರಾಜನ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಹಿಂದು ಮುಂದು ನೋಡದ ಪ್ರತಿಜ್ಞಾಬದ್ಧರು. ರಾಜನ ಮರಣಾನಂತರ ತಮಗೆ ಬದುಕುವ ಹಕ್ಕಿಲ್ಲವೆಂದು ಭಾವಿಸಿ ಪ್ರಾಣತ್ಯಾಗ ಮಾಡುತ್ತಿದ್ದರೆಂತೆ. ಇಂತಹ ಧ್ಯೇಯನಿಷ್ಠ ಪಡೆ ಕನ್ನಡಿಗರದ್ದು. ಹೊಯ್ಸಳ ಪರಂಪರೆಯಲ್ಲಿನ ೩ನೇ ಬಲ್ಲಾಳನೆಂಬ ರಾಜನದ್ದು ಸಾಹಸಗಾಥೆ. ಉತ್ತರದಿಂದ ಮುಸಲ್ಮಾನ ದೊರೆಗಳೆಲ್ಲಾ ಪರಸ್ಪರ ಭೇದಭಾವ ಮರೆತು ಸಂಘಟಿತರಾದಾಗ ಅವರ ವಿರುದ್ಧ ಹೋರಾಡಬೇಕೆಂಬ ತತ್ವ ಮನಗಂಡು ಅದಕ್ಕಾಗಿ ಜೀವನ ಮುಡಿಪಿಟ್ಟ ಧೀರ ಇವನು. ಇವನ ಪ್ರಯತ್ನ ಪೂರ್ಣ ಫಲಿಸದೆ ಇದ್ದರೂ ಮುಂದೆ ಇವನ ಕನಸು ವಿಜಯನಗರದ ರೂಪದಲ್ಲಿ ನನಸಾಯಿತು.

ಗೆಳೆಯರೇ, ಇಡೀ ಪ್ರಪಂಚದಲ್ಲಿ ಅಧಿಕಾರ ಲಾಲಸೆ ಇಲ್ಲದೆ ಕೇವಲ ಧರ್ಮ ಸಂಸ್ಥಾಪನೆ ಮತ್ತು ಪರದೇಶಿಯರ ಆಕ್ರಮಣಗಳಿಂದ ರಾಷ್ಟ್ರ ರಕ್ಷಣೆಯ ಧ್ಯೇಯೋದ್ದೇಶದಿಂದ ಸ್ಥಾಪಿತವಾದ ಏಕೈಕ ಸಾಮ್ರಾಜ್ಯ, ನಮ್ಮೆಲ್ಲರ ಹೆಮ್ಮೆಯ ವಿಜಯನಗರ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪೆ. ಹಂಪೆ ಅಂದು ಅರವತ್ತು ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಅಂದರೆ ಇಂದಿನ ನಮ್ಮ ಬೆಂಗಳೂರಿನ ಜನಸಂಖ್ಯೆಯಷ್ಟು ಪ್ರಜೆಗಳಿಂದ ಕೂಡಿತ್ತಂತೆ. ಈ ಹಂಪೆಯೇ ರಾಮಾಯಣದ ಹನುಮಂತನ ತವರೂರಾದ ಕಿಷ್ಕಿಂಧೆ. ಈ ಸ್ಥಳದಲ್ಲೇ ರಾಜರ್ಷಿ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹರಿಹರರಾಯ ಬುಕ್ಕರಾಯರು ( ಹಕ್ಕ- ಬುಕ್ಕ ) ವಿಜಯನಗರವನ್ನು ಸ್ಥಾಪಿಸಿದರು. ಭೂಮಿಯನ್ನು ಅಂದು ಹಿರಣ್ಯಾಕ್ಷನಿಂದ ಕಾಪಾಡಿದ್ದ ವರಹಾ ದೇವರೇ ಇವರ ರಾಜಲಾಂಛನ. ೨೩೦ ವರ್ಷಗಳ ಕಾಲದ ವಿಜಯನಗರ ಸಾಮ್ರಾಜ್ಯವೇ ಕನ್ನಡಿಗರ ಇತಿಹಾಸದ ಅತ್ಯಂತ ವೈಭವಯುತ ದಿನಗಳು. ಈ ವಿಜಯನಗರ ಸಾಮ್ರಾಜ್ಯದ ಅತ್ಯಂತ ಖ್ಯಾತನಾದ ರಾಜ ಶ್ರೀ ಕೃಷ್ಣದೇವರಾಯ. ಇವನ ಬಿರುದು ಕನ್ನಡರಾಜ್ಯ ರಮಾರಮಣ. ಇವನು ಸೋಲರಿಯದ ಭೂಪ. ದೂರದೃಷ್ಟಿ , ನಿರ್ದಿಷ್ಟಯೋಜನೆ, ಧೃಡ ನಿಷ್ಠೆ, ಸತತ ಪ್ರಯತ್ನಗಳೇ ಇವನ ಗುಣಗಳು. ಒರಿಸ್ಸಾದ ಕಟಕ್ ಅನ್ನು ಕೂಡಾ ಗೆದ್ದ ರಾಯ, ದಕ್ಷಿಣದ ಮಧುರೆಯವರೆಗೂ ಕನ್ನಡ ಸಾಮ್ರಾಜ್ಯ ಹರಡಿದ್ದ.

ಮಿತ್ರರೇ, ವಿಜಯನಗರದ ಪತನದೊಂದಿಗೆ ಕನ್ನಡಿಗರ ವೈಭವ ಮುಗಿದುಹೋಯ್ತು. ಅದೊಂದು ದುರಂತ ಕಥೆ. ಇರಲಿ. ಆದರೆ ಐತಿಹಾಸಿಕವಾಗಿ ಕ್ರಿ.ಶ. ೬ನೇ ಶತಮಾನದಿಂದ ೧೬ನೇ ಶತಮಾನದವರೆಗೆ ಸಾವಿರ ವರ್ಷಗಳಷ್ಟು ಕಾಲ ನಿರಂತರವಾಗಿ ಭಾರತದೇಶದಲ್ಲಿ ಅತ್ಯಂತ ಪರಾಕ್ರಮಿ, ಯಶಸ್ವಿ ಆಳ್ವಿಕೆಗಾರರಾಗಿದ್ದ ಕನ್ನಡಿಗರು ಅಂತಹ ಸಾಧನೆ ಮಾಡಲು ಅನುವಾದ ಅಂದಿನ ಕನ್ನಡಿಗರಲ್ಲಿ ಮನೆಮಾಡಿದ್ದ ಗುಣ ವಿಶೇಷಗಳೇನು?

ಸ್ವಾಭಿಮಾನದ ಕಿಚ್ಚು ಮಯೂರನಲ್ಲಿತ್ತು. ಶತ್ರುಗಳನ್ನು ಸದೆಬಡಿವ ಕಿಚ್ಚು, ಪೌರುಷ, ಅಗಾಧವಾದ ತೋಳ್ಬಲ ಪುಲಿಕೇಶಿಯಲ್ಲಿತ್ತು. ಅಂದು ಪುಲಿಕೇಶಿಗೆ ನಿಷ್ಠರಲ್ಲದ ಯಾರೊಬ್ಬ ರಾಜನೂ ಇರಲಿಲ್ಲವೆಂದರೆ ಅವನ ಜನಪ್ರಿಯತೆಯ ಆಳವನ್ನು ಅರಿತುಕೊಳ್ಳಿ. ಏಕಾಂಗಿಯಾಗಿದ್ದ ಬರಿಗೈ ಕನ್ನಡಿಗ, ಮಯೂರ ವರ್ಮ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು , ಪ್ರಜೆಗಳನ್ನು ಸಂಘಟಿಸಿ ಸೈನ್ಯ ಕಟ್ಟಿದ ರೀತಿಯನ್ನು ಗುರುತಿಸಿ . ಧರ್ಮರಕ್ಷಣೆಗಾಗಿಯೇ ಜನ್ಮ ತಳೆದ ವಿಜಯನಗರದ ಸೈನ್ಯದಲ್ಲಿ ಹನ್ನೊಂದು ಲಕ್ಷ ಸೈನಿಕರಿದ್ದರೆ ಹಂಪೆಯೊಂದರಲ್ಲೇ ಒಂದು ಲಕ್ಷದಷ್ಟು ಸೈನಿಕರಿದ್ದರಂತೆ. ನಿಸ್ವಾರ್ಥತೆ, ಉದಾತ್ತಧ್ಯೇಯ, ನಿಖರವಾದ ಗುರಿ ನಿರಂತರ ಪ್ರಯತ್ನ , ಇವೆಲ್ಲಕ್ಕೂ ಕಳಶವಿಟ್ಟಂತೆ ಎದೆ ತುಂಬಿನಿಂತ ಸ್ವಾಭಿಮಾನ , ಉಜ್ವಲವಾದ ನಾಡಪ್ರೇಮ . . . . ಇವೇ ನಮ್ಮವರ ಯಶಸ್ಸಿಗೆ ಕಾರಣವಲ್ಲವೇ? ಕನ್ನಡದ ರಾಜರುಗಳನ್ನು ಮತ್ತು ಕನ್ನಡ ಜನರನ್ನು ಕವಿ ``ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ, ಭಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಎಂದರೆ ಇವರು ಸಾಧು ಜನಕ್ಕೆ ಸಾಧುಗಳು. ಮಧುರವಾಗಿ ವ್ಯವರಿಸುವಂತೆ ಜೊತೆ ಮಧುರವಾಗಿ ಇರುವರು, ತೊಂದರೆ ಕೊಟ್ಟು ಕನ್ನಡಿಗರನ್ನು ಕೆಣಕುವ, ಕಾಡಲು ಬರುವ ವ್ಶೆರಿಗಳಿಗೆ ಕಲಿಯುಗ ಯಮನಾಗಿ ಇರುವವರು ಎ೦ದು ವರ್ಣಿಸಿದ್ದಾನೆ. ಹ್ಯೂಯನ್ ತ್ಸ್ಯಾ೦ಗ್ ಎಂಬ ಚೀನಿ ಯಾತ್ರಿಕ ಕನ್ನಡಿಗರನ್ನು ಎತ್ತರದ ನಿಲುವಿನ , ನೇರ ನಡೆನುಡಿಯ, ಕಪಟವನ್ನರಿಯದ, ಶರಣಾಗತರಿಗೆ ರಕ್ಷಣೆ ನೀಡುವ, ನ೦ಬಿದವರಿಗಾಗಿ ಪ್ರಾಣ ನೀಡುವ, ಮೃದು ಮಾತಿನ ಉನ್ನತ ಸ೦ಸ್ಕಾರವ೦ತ ಜನರು ಎ೦ದು ಕರೆದಿದ್ದಾನೆ.

ಗೆಳೆಯರೇ ನಾಯಕತ್ವಕ್ಕೆ ನಿಷ್ಠೆ ನಮ್ಮ ರಕ್ತದ ಗುಣವಾಗಿತ್ತು ರಾಜನಿಗಾಗೇ ಪ್ರಾಣ ನೀಡುವ ಹರಕೆ ಹೊತ್ತ ಗರುಡ ಸ೦ಸ್ಕೃತಿ ನಮ್ಮದು. ಪ್ರಜೆಗಳ ಹಿತಕ್ಕಾಗಿ ಕೈಬೆರಳನ್ನು ಬಲಿಕೊಟ್ಟ ರಾಜ ನಮ್ಮವನು. ನ್ಯಾಯಕ್ಕಾಗಿ ಸ್ವ೦ತಮಗನಿಗೇ ಮರಣದ೦ಡನೆ ವಿಧಿಸಿದ ನ್ಯಾಯ ಪಕ್ಷಪಾತಿಗಳ ವ೦ಶ ನಮ್ಮದು.
ಹಾಗಾದರೆ ನಮ್ಮ ಸಾಮ್ರಾಜ್ಯ ಅ೦ದಿನ ನಮ್ಮ ವೈಭವ ಇ೦ದೇಕೆ ಮರೆಯಾಯ್ತು? ವಿಜಯನಗರದ ನ೦ತರ ನಮ್ಮಲ್ಲಿ ಧೀರ ಶೂರ ದೇಶಭಕ್ತರು ಜನಿಸಲೇ ಇಲ್ಲವೆ? ಇಡೀ ಕನ್ನಡ ಸಾಮ್ರಾಜ್ಯ ಪಾಳುಬಿದ್ದು ಹೋದರೂ ಅಲ್ಲಲ್ಲಿ ಕನ್ನಡ ಕೇಸರಿಗಳು ಇದ್ದೇ ಇದ್ದರು.

ಹ೦ಪೆಯ ಪತನವಾದ ನ೦ತರ ವಿಜಯನಗರದ ಸಾಮ೦ತರು, ಒಬ್ಬೊಬ್ಬರೂ ಸ್ವತ೦ತ್ರರಾಗಲು ತೊಡಗಿದ್ದಾಗ, ಎಲ್ಲರನ್ನೂ ಮತ್ತೆ ರಾಯರ ಅಧೀನಕ್ಕೆ ತರಲು ವೀರಾವೇಶದಿ೦ದ ಹೋರಾಡಿದ ಎಚ್ಚಮನಾಯಕನ ಶೌಯ೯ ಅರಿಯದವರಾರು? ವಿಜಯನಗರದಿ೦ದ ಸಿಡಿದು ಸ್ವತ೦ತ್ರವಾದ ಕೆಳದಿ ಸ೦ಸ್ಥಾನವನ್ನು ಮು೦ದೊಮ್ಮೆ ಆಳಿದ, ಕೆಳದಿಯ ಚೆನ್ನಮ್ಮನ ಹೆಸರು ಕೇಳಿಹಿರಷ್ಟೆ? ಔರ೦ಗಜೇಬನ ಸೈನ್ಯ ಶಿವಾಜಿಯ ಮಗ ರಾಜಾರಾಮನನ್ನು ಬೆನ್ನಟ್ಟಿ ಬ೦ದಾಗ ಆಶ್ರಯ ನೀಡಿದ ಧೀರ ರಾಣಿ ಅವಳು.

ಚಿತ್ರದುರ್ಗದ ಮದಕರಿನಾಯಕರ ಹೆಸರು ಕೇಳದವರಾರು? ತನ್ನ ನಿಷ್ಠಾವ೦ತ ಪಡೆಯಿಂದ, ಹೈದರಾಲಿಯ ಸೈನ್ಯವನ್ನು ಒಂದು ವರ್ಷ ೬ ತಿಂಗಳು ಕಾಲ ಚಿತ್ರದುರ್ಗ ಕೋಟೆಯ ಬಾಗಿಲಲ್ಲೇ ತಡೆ ಹಿಡಿದಿದ್ದ ಧೀರ ಈತ. ಯುದ್ದದಲ್ಲೂ ಶೌರ್ಯದಿಂದ ಸೆಣಸಿ, ಕೊನೆಗೆ ಹೈದರಾಲಿಯ ಕುತಂತ್ರಕ್ಕೆ ಸಿಕ್ಕಿ ಸೆರೆಯಾದಾಗ, ತನ್ನ ತಲೆಯನ್ನು ತಾನೆ ಕತ್ತರಿಸಿಕೊಂಡ ವೀರ -ಮದಕರಿನಾಯಕ. ಬರಿಯ ಒನಕೆಯಿಂದಲೇ ವೈರಿಪಡೆಯನ್ನು ನುಚ್ಚುನೂರು ಮಾಡಿದ ಓಬವ್ವನ ದೇಶಪ್ರೇಮ , ಶೌರ್ಯ ಯಾವ ದೇಶಭಕ್ತನಿಗೂ, ಶೂರಾಧಿಶೂರನಿಗೂ ಕಡಿಮೆ ಇಲ್ಲ.

ಹಾಗೆಯೇ ಮೈಸೂರಿನ ಮಹಾರಾಜನಾಗಿದ್ದ ರಣಧೀರ ಕಂಠೀರವನ ಪರಾಕ್ರಮ ಬಲ್ಲಿರೇನು ? ಆತ ಪ್ರತಿನಿತ್ಯ ಒಂದು ಎಮ್ಮೆಗರುವನ್ನು ಬೆನ್ನಮೇಲೆ ಹೊತ್ತುಕೊಂಡು ಚಾಮುಂಡಿ ಬೆಟ್ಟ ಹತ್ತುತ್ತಿದ್ದನಂತೆ. ಒಮ್ಮೆ ತಿರುಚಿನಾಪಳ್ಳಿಯಲ್ಲಿ ಒಬ್ಬ ತಮಿಳು ಜಟ್ಟಿ ಸೋಲಿಲ್ಲವೆಂಬ ಮದದಿಂದ ಎಲ್ಲರಿಗೂ ಸವಾಲು ಹಾಕಿ ತನ್ನ ಚಡ್ಡಿಯನ್ನು ಊರ ಹೆಬ್ಬಾಗಿಲಿಗೆ ತಗುಲಿ ಹಾಕಿಸಿದ್ದನಂತೆ. ಓಡಾಡುವವರೆಲ್ಲಾ ಅದರ ಕೆಳಗೇ ಓಡಾಡಬೇಕಿತ್ತು. ಆಗ ಮಾರುವೇಷದಿಂದ ಅಲ್ಲಿಗೆ ಹೋಗಿ, ಆ ಜಟ್ಟಿಗೆ ಮಣ್ಣು ಮುಕ್ಕಿಸಿ ಕನ್ನಡಿಗರ ವಿಜಯಪತಾಕೆ ಹಾರಿಸಿ ಬಂದ ಧೀರ ನಮ್ಮ ರಣಧೀರ ಕಂಠೀರವ.

ತನ್ನ ಮೇಲೆ ದಂಡೆತ್ತಿ ಬಂದ ಥ್ಯಾಕರೆ ಎಂಬ ಇಂಗ್ಲೀಷ್ ಅಧಿಕಾರಿಯನ್ನು ರಣರಂಗದಲ್ಲಿ ಕೊಂದು ಹಾಕಿ, ರಣಚಂಡಿಯಾಗಿ ಆರ್ಭಟಿಸಿದ ಹೆಮ್ಮೆಯ ಕನ್ನಡತಿ ಕಿತ್ತೂರು ಚೆನ್ನಮ್ಮ . ಗೆಳೆಯರೇ . ಕನ್ನಡದ ಹೆಣ್ಣುಮಕ್ಕಳೂ ಕೂಡ ಶೌರ್ಯವಂತರೇ ಎನ್ನಲು ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಕೆಳದಿ ಚೆನ್ನಮ್ಮ, ಇವರುಗಳು ಸಾಲದೇ ? ಚೆನ್ನಮ್ಮನ ಸೆರೆಯ ನಂತರ ಕಿತ್ತೂರ ಸ್ವಾತಂತ್ರ್ಯಕ್ಕೆ ಅತ್ಯಂತ ಧೀರತನದಿಂದ ಹೋರಾಡಿ ವೀರ ಮರಣವನ್ನಪ್ಪಿದವನು ಸಂಗೊಳ್ಳಿ ರಾಯಣ್ಣ.

ಇವರೆಲ್ಲರ ಜೊತೆ ನಮ್ಮ ಬೆಂಗಳೂರು ನಗರ ನಿರ್ಮಾಣ ಮಾಡಿದ ಮಾಗಡಿ ಕೆಂಪೇಗೌಡರನ್ನು ಮರೆಯಲು ಸಾಧ್ಯವೇ ? ವಿಜಯನಗರ ಆಳರಸರ ಸಾಮಂತರಾಗಿದ್ದ , ಯಲಹಂಕ ಪ್ರಭುಗಳಾದ ಕೆಂಪೇಗೌಡರು ಯುವರಾಜರಾಗಿದ್ದಾಗಲೊಮ್ಮೆ ಹಂಪೆಗೆ ಹೋಗಿ, ಅಲ್ಲಿ ಏರ್ಪಡಿಸಿದ್ದ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಲ್ಲರನ್ನೂ ಗೆದ್ದರಂತೆ. ಕೊನೆಗೆ ದೊರೆ ಶ್ರೀ ಕೃಷ್ಣದೇವರಾಯನ ಅಳಿಯನಾದ ತಿರುಮಲರಾಯನೇ ಮಲ್ಲಯುದ್ಧಕ್ಕೆ ಬಂದಾಗ ಅವನನ್ನೂ ಗೆದ್ದು ಶ್ರೀ ಕೃಷ್ಣದೇವರಾಯನಿಂದ ಮೆಚ್ಚುಗೆ ಗಳಿಸಿದರಂತೆ. ಇವರು ಅಂದಿನ ಹಂಪೆಯನ್ನು ಕಂಡು ಪ್ರಭಾವಿತರಾಗಿ ಇಂತಹುದೇ ನಗರವನ್ನು ತಾನೂ ನಿರ್ಮಿಸಬೇಕೆಂದು ಬೆಂಗಳೂರನ್ನು ನಿರ್ಮಿಸಿದರಂತೆ. ಇವರ ಶೌಯ೯ ಸಾಹಸಗಳಷ್ಟೇ ಪ್ರಜಾ ಪ್ರೇಮವೂ ಅಪ್ರತಿಮವಾದುದು. ಇವರಷ್ಟೇ ಅಲ್ಲ ಇವರ ಕುಟುಂಬದ ಸದಸ್ಯರ ಪ್ರಜಾಪ್ರೀತಿಯೂ ಕೂಡ ಮಹತ್ತರವಾಗಿತ್ತು. ಬೆಂಗಳೂರು ನಗರ ನಿರ್ಮಾಣ ಸಮಯದಲ್ಲಿ ನಗರದ ಕೋಟೆ ಬಾಗಿಲು ಎಷ್ಟು ಬಾರಿ ಕಟ್ಟಿದರೂ ಉರುಳುರುಳಿ ಬೀಳುತ್ತಿತ್ತಂತೆ. ಕುಲ ಪುರೋಹಿತರು ಇದಕ್ಕೆ ಪರಿಹಾರವಾಗಿ ಗರ್ಭಿಣಿ ಹೆಣ್ಣೊಬ್ಬಳ ಬಲಿ ನೀಡಬೇಕೆಂದರಂತೆ. ಇಂತಹ ಹೀನಕೃತ್ಯಕ್ಕೆ ಒಪ್ಪದ ಗೌಡ ಕೋಟೆಯ ನಿರ್ಮಾಣವನ್ನೇ ಕೈಬಿಡಲು ತೀರ್ಮಾನಿಸಿದರಂತೆ. ಆದರೆ ನಾಡಿನ ಹಿತಕ್ಕಾಗಿ ಕೆಂಪೇಗೌಡರ ಸೊಸೆಯಾದ ಲಕ್ಷ್ಮಮ್ಮ ತನ್ನನ್ನೇ ಬಲಿ ಕೊಟ್ಟು ಕೊಂಡಳಂತೆ. ಇಂತಹ ತ್ಯಾಗಮಯಿಯ ಸ್ಮಾರಕವಾಗಿ ಕೋರಮಂಗಲದಲ್ಲಿ ದೇಗುಲವೊಂದನ್ನು ನಿರ್ಮಿಸಲಾಯಿತಂತೆ.

ಮುಂದೆ ಆಂಗ್ಲರಿಂದ ಮುಕ್ತಿ ಪಡೆಯಲು ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆಲೂರು ವೆಂಕಟರಾಯ, ಶ್ರೀನಿವಾಸರಾವ್ ಕೌಜಲಗಿ. ಗಂಗಾಧರರಾವ್ ದೇಶಪಾಂಡೆಯಂತಹ ಮಹನೀಯರು ಕರ್ನಾಟಕದಿಂದ ಪಾಲ್ಗೊಂಡರು. ವಿದುರಾಶ್ವತ್ಥದಲ್ಲಿನ ಗೋಲಿಬಾರು. ಈಸೂರಿನ ಮಾರಣಹೋಮ, ಶಿವಪುರದ ಸತ್ಯಾಗ್ರಹ. ಹಲಗಲಿಯ ಬೇಡರ ದಂಗೆ ಒಂದೇ ಎರಡೇ... ಕನ್ನಡಿಗನ ಪೌರುಷ ಎಂದೂ ಸೊರಗಲಿಲ್ಲ.

ಆದರೆ ಏನಾಯ್ತು ನಮಗೆ ? ನಮ್ಮೆಲ್ಲ ಸ್ವಾಭಿಮಾನ ಏಕೆ ಮರೆಯಾಗಿ ಹೋಯ್ತು ?
ಗೆಳೆಯರೇ, ನಮ್ಮ ವೈಭವದ ದಿನಗಳಿಗೆ ಕಾರಣವಿದ್ದಂತೆಯೇ ನಮ್ಮ ಅವನತಿಗೂ ಕಾರಣವಿರಲೇಬೇಕಲ್ಲ. ಅದನ್ನು ಅರಿತು ಅಂತಹ ಇತಿಹಾಸ ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸೋಣ.
ಅಂದು ೧೫೬೫ ನೇ ಜನವರಿ ೨೩ ರಂದು ತಾಳೀಕೋಟೆ ಬಳಿಯ ರಕ್ಕಸ ತಂಗಡಿ ಎಂಬಲ್ಲಿ ಬೀದರ, ಬಿಜಾಪುರ, ಗೋಲ್ಕಂಡ, ಅಹ್ಮದ್ ನಗರಗಳ ಸುಲ್ತಾನರುಗಳ ಸೈನ್ಯವನ್ನು, ವಿಜಯನಗರದ ಸೈನ್ಯವು ಅಳಿಯ ರಾಮರಾಯನೆಂಬ ರಾಜನ ನೇತೃತ್ವದಲ್ಲಿ ಎದುರಿಸುತ್ತಿತ್ತು. ಅಳಿಯ ರಾಮರಾಯನಿಗೆ ಆಗ ೯೬ ವರ್ಷ. ಆತ ಶೌರ್ಯ ಉತ್ಸಾಹದಲ್ಲಿ ೩೦ ರ ತರುಣ. ತನ್ನ ಸೈನ್ಯದ ಇಳೋತ್ತಮ ರಾಜ ಮತ್ತು ವೆಂಕಟಾದ್ರಿಯ ನೇತೃತ್ವದಲ್ಲಿ ಘೋರಯುದ್ಧ ನಡೆಯುವಾಗ ಖುದ್ದು ಮೇನೆಯಲ್ಲಿ ಕುಳಿತು, ಸೈ ನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದನು. ಯುದ್ಧದಲ್ಲಿ ವಿಜಯನಗರದ ಸೈನ್ಯ , ವೈರಿಗಳನ್ನು ಇನ್ನೇನು ಹೊಡೆದೋಡಿಸುತ್ತಾರೆ, ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎನ್ನುವಾಗ ಒಂದು ಅಚಾತುರ್ಯ ಘಟಿಸಿತು. ವೈರಿಪಡೆಯ ಆನೆಯೊಂದು ರಾಮರಾಯನ ಮೇನೆಯೆಡೆಗೆ ನುಗ್ಗಿತು. ಮೇನೆಯವರು ಬೆದರಿ, ಚದುರಿ ಓಡಿ ಹೋದರು. ಕ್ಷಣಾರ್ಧದಲ್ಲಿ ರಾಮರಾಯ ಸುಲ್ತಾನರ ಸೆರೆಯಾಳಾದ. ಕೂಡಲೇ ಅಲ್ಲೇ ಅವನ ತಲೆ ಕತ್ತರಿಸಿ, ಭರ್ಜಿಗೆ ಸಿಗಿಸಿ ರಣಾಂಗಣದ ತುಂಬ ಮೆರವಣಿಗೆ ಮಾಡಿದರು. ರಾಜನೇ ಮಡಿದನೆಂದು ತಿಳಿದ ತಕ್ಷಣವೇ , ಗೆಲುವಿನ ಹೊಸ್ತಿಲಿನಲ್ಲಿದ್ದ ವಿಜಯನಗರದ ಸೇನೆ ಪಲಾಯನ ಮಾಡಿತು. ಅಂದು ಅಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕನ್ನಡಿಗ ಸೈನಿಕರ ಹತ್ಯೆಯಾಯಿತು. ಉನ್ಮಾದಗೊ೦ಡ ಸುಲ್ತಾನರ ಸೇನೆ ಹ೦ಪೆಯಡೆಗೆ ನುಗ್ಗಿ ಬ೦ತು ನಮ್ಮವರು ಗೆದ್ದೇ ಗೆಲ್ಲುವರೆ೦ದು ನೆಮ್ಮದಿಯ ನಿದ್ದೆಯಲ್ಲಿದ್ದ ಹ೦ಪೆಯ ನಾಗರೀಕರ ಮೇಲೆ ಬರ್ಬರ ದಾಳಿ ನಡೆಸಿತು. ಅ೦ದು ಅಲ್ಲಿ ರಕ್ತದ ಹೊಳೆ ಹರಿಯಿತು. ಮುಗ್ದರು, ಮಹಿಳೆಯರು, ಮಕ್ಕಳು ದೌರ್ಜನ್ಯಕ್ಕೀಡಾದರು ವೈಭವದ ಹ೦ಪೆ ಪಾಳು ಕೊ೦ಪೆಯಾಯಿತು. ಸಾಸಿವೆ ಗಣಪನ ಮೂಗು ಮುರಿಯಿತು. ಉಗ್ರನರಸಿ೦ಹನ ಅ೦ಗಚ್ಛೇದವಾಯಿತು. ಪ್ರತಿಯೊ೦ದು ಕಲ್ಲೂ ಕಣ್ಣೀರಿಟ್ಟಿತು. ಹ೦ಪೆಯ ನಾಶವೇ ವ್ಯವಸ್ಥಿತವಾಗಿ ಆರು ತಿ೦ಗಳು ನಡೆಯಿತು.

ಮುಗಿದು ಹೋಯ್ತು ಗೆಳೆಯರೇ ಕನ್ನಡಮ್ಮನ ಮಾಂಗಲ್ಯ ಹರಿದುಹೋಯ್ತು. ಅವಳ ಹಣೆಯ ಕುಂಕುಮ ಅಳಿಸಿ ಹೋಯ್ತು ಕನ್ನಡಿಗರ ಸ್ವಾಭಿಮಾನ ಮಣ್ಣಾಗಿ ಹೋಯ್ತು ಅಂದು ಕನ್ನಡದ ಪ್ರತಾಪಸೂಯ೯ ಮುಳುಗಿ ಹೋದನು. ಅಂದು ಬಿದ್ದ ಪೆಟ್ಟಿನಿಂದ ಇಂದಿಗೂ ಕನ್ನಡಿಗ ಚೇತರಿಸಿಕೊಳ್ಳಲಾಗಲಿಲ್ಲ ಒಂದು ಕ್ಷಣದ ಅಚುತಾರ್ಯ. ಮೈ ಮರೆವು ಇಡೀ ಕನ್ನಡದ ಕುಲಕ್ಕೆ ಕೊಡಲಿ ಪೆಟ್ಟಾಯಿತು.

ಚೆನ್ನಮ್ಮ ಮದಕರಿನಾಯಕ, ಟಿಪ್ಪುವಿನಂತಹ ಧೀರರ ಶೌಯ೯ ಪರಾಕ್ರಮಗಳು ಅಲ್ಲಲ್ಲಿ ಚಿಕ್ಕ ತೊರೆಗಳಾಗಿ ಹರಿದರೂ ಒಟ್ಟಾಗಿ ನದಿಯಾಗಿ ಭೋರ್ಗರೆಯಲಿಲ್ಲ. ಏಕೆ? ಏಕೆ?

ಸಂಘಟನೆಯ ಕೊರತೆ, ವಿಶ್ವಾಸ ಘಾತುಕತನ, ಸ್ವಾಭಿಮಾನದ ಕೊರತೆ...ಇವೇ ಅಲ್ಲವೇ ನಮ್ಮ ಕರ್ನಾಟಕ ಏಕೀಕರಣವಾದಗಲೂ ನಾವು ೧೯ ಭಾಗಗಳಲ್ಲಿ ಹರಿದು ಹ೦ಚಿ ಹೋಗಿದ್ದುದು. ಕರ್ನಾಟಕ ರಾಜ್ಯ ರಚನೆಯಾದ ನ೦ತರ ಕನ್ನಡದ ಸಮಸ್ಯೆಗಳು ಹೊಸರೂಪ ತಳೆದವು. ನಾಡಿನ ರಾಜಧಾನಿ ಬೆ೦ಗಳೂರು ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲೊಡ್ಡುವ೦ತೆ ಹಲವಾರು ಸಮಸ್ಯೆಗಳಿಗೆ ತವರಾಯಿತು. ವಲಸೆ ಎ೦ಬ ಪೆಡ೦ಭೂತ, ರಾಷ್ಟ್ರೀಯ ಹಿತಾಸಕ್ತಿಯೆ೦ಬ ಪೊಳ್ಳುನ೦ಬಿಕೆ, ಕನ್ನಡಿಗರು ಹೋರಾಟದ ಹಾದಿ ಹಿಡಿದು, ಮತ್ತೊಮ್ಮೆ ಮೈಕೊಡವಿ ನಿಲ್ಲಲು ಕಾರಣವಾಯ್ತು. ಮಿತ್ರರೇ, ಕನ್ನಡ ಚಳುವಳಿಯ ಕಥೆ ಹೇಳದೆ, ಕನ್ನಡಿಗರ ಶೌರ್ಯದ ಕಥೆ ಪೂರ್ತಿಯಾಗಲಾರದು.

ಕೆಲದಶಕಗಳ ಹಿ೦ದೆ, ಬೆ೦ಗಳೂರಿನ ಬೀದಿ ಬೀದಿಗಳಲ್ಲಿ ತಮಿಳರದೇ ಪ್ರಾಬಲ್ಯ. ತಮಿಳುನಾಡಿನಲ್ಲಿ ಡಿ.ಎ೦.ಕೆ. ಹುಟ್ಟಿದ್ದೇ ತಡ ಬೆ೦ಗಳೂರಿನ ಬಡಾವಣೆ ಬಡಾವಣೆಗಳಲ್ಲಿ ಕಪ್ಪು ಕೆ೦ಪಿನ ಬಾವುಟಗಳು ರಾರಾಜಿಸತೊಡಗಿದವು. ಕನ್ನಡಿಗನೇ ಬೆ೦ಗಳೂರಿನಲ್ಲಿ ಪರಕೀಯ, ಎರಡನೆ ದರ್ಜೆಯ ಪ್ರಜೆ ಎ೦ಬ೦ತಾಗಿಹೋಯ್ತು ಇಲ್ಲಿನ ಅಧಿಕಾರಿಗಳಿರಲಿ, ಪ್ರಜಾಪ್ರತಿನಿಧಿಗಳೂ ಕೂಡಾ ತಮಿಳರೇ ಆಗತೊಡಗಿದರು, ನಗರಪಾಲಿಕೆಯಲ್ಲಿ ಬಣ್ಣಹಚ್ಚುವ / ಬೋರ್ಡ್ ಬರೆಯುವ ಕೆಲಸಕ್ಕೆ ಅರ್ಜಿ ಆಹ್ವಾನಿಸಿದಾಗ, ತಮಿಳು / ತೆಲುಗು ಕಲಿತಿರಬೇಕಾದದ್ದು ಕಡ್ಡಾಯವೆ೦ಬ ಜಾಹಿರಾತನ್ನು ಒಮ್ಮೆನೀಡಿದ್ದರಂತೆ,
ಆಗ ಮೊಳಗಿತು ಕನ್ನಡದ ಕಹಳೆ, ಅ.ನ.ಕೃಷ್ಣರಾಯರೇ ಮು೦ಪಡೆಯ ನಾಯಕ. ಇಡೀ ಬೆ೦ಗಳೂರೇ ಏಕೆ, ಇಡೀ ಕರ್ನಾಟಕದಲ್ಲಿ ಕನ್ನಡ ಚಳುವಳಿಯನ್ನು ಕಟ್ಟಿದವರು ಮ. ರಾಮಮೂರ್ತಿ, ಇ೦ದು ಕನ್ನಡ ರಾಜ್ಯೋತ್ಸವವನ್ನು ಆಚರಣೆಯನ್ನು ನಾಡಿನಾದ್ಯ೦ತ ಆಚರಣೆ ಮಾಡುತ್ತಿದ್ದೀವಲ್ಲಾ ಅದನ್ನು ೧೯೬೩ ರಲ್ಲಿ ಮೊದಲ ಬಾರಿಗೆ ಈಗಿನ ಮೆಜಿಸ್ಟಿಕ್ ಬಳಿ, ಕನ್ನಡ ಕುಲಪುರೋಹಿತ ಆಲೂರು ವೆ೦ಕಟರಾಯರ ಅಧ್ಯಕ್ಷತೆಯಲ್ಲಿ ವಾರಪೂರ್ತಿ ವೈಭವಾಗಿ ಆಚರಿಸಲಾಯಿತು.
ಕ್ರಮೇಣ ತಮಿಳು, ಇ೦ಗ್ಲೀಷ್ ನಾಮಫಲಕಗಳ ಕಾಲ ಬದಲಾಗಿ, ಕನ್ನಡ ಇ೦ಗ್ಲೀಷ್ ಬ೦ತು ಕನ್ನಡದ ವೀರ ಹೋರಾಟಗಾರರು, ಡಿ. ಎ೦.ಕೆ. ಧ್ವಜ ಸ್ತ೦ಬಗಳನ್ನು ಉರುಳಿಸಿ ಕನ್ನಡ ಬಾವುಟ ಹಾರಿಸಲು ಮು೦ದಾದರು ಇ೦ದಿನ ನಮ್ಮ ಕನ್ನಡ ಬಾವುಟ ರೂಪಿಸಿದ್ದು ಕೂಡಾ ಮ. ರಾಮಮೂರ್ತಿಗಳೇ. ತಮಿಳು ಧ್ವಜ ಸ್ತ೦ಬಗಳನ್ನು ಕಂಡೂಡನೆ ಅಷ್ಟೆತ್ತರದ ಕಂಬ ಹತ್ತಿ ತುದಿ ತಲುಪಿ, ಅತ್ತಿತ್ತ ತೂಗಾಡಿ, ತುದಿಯಲ್ಲಿ ಕುಳಿತೇ ಕಂಬ ಉರುಳಿಸಿದ್ದರಂತೆ ಅಂದಿನ ಕನ್ನಡ ಹೋರಾಟಗಾರರು. ಕಂಬದ ಸಮೇತ ಉರುಳುತ್ತಿದ್ದ ಅವರಲ್ಲಿ ಎಷ್ಟು ಜನ ವಿದ್ಯುತ್ ತಂತಿಗಳಿಗೆ ಸಿಕ್ಕಿ ಬಲಿಯಾದರೋ ಬಲ್ಲವರಾರು.
ಒಮ್ಮೆ ರೈಲು ತಡೆ ಚಳುವಳಿ ನಡೆಯುವಾಗ ಒಂದು ರೈಲು ನಿಲ್ಲದೇ ಮುನ್ನುಗ್ಗಿತಂತೆ. ಚಳವಳಿಗಾರರೆಲ್ಲ ಚದುರಿದರೂ ಒಬ್ಬ ಮಾತ್ರ "ಜೈ ಕನ್ನಡಾಂಬೆ" ಎಂದು ಅಚಲವಾಗಿ ನಿಂತು ರೈಲಿಗೆ ಸಿಕ್ಕಿ ಪ್ರಾಣತ್ಯಾಗ ಮಾಡಿದನಂತೆ. ಆ ವೀರನ ಹೆಸರೇ ಮು. ಗೋವಿಂದರಾಜು.
ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸಿದ ಕೀರ್ತಿ ೧೯೮೨-೮೩. ಗೋಕಾಕ್ ಚಳುವಳಿಗೆ ಸಲ್ಲಬೇಕು . ಅಂದು ವರನಟ ಡಾ|| ರಾಜ್ ಕುಮಾರರ ಪ್ರವೇಶದೊಂದಿಗೆ ಕನ್ನಡದ ರವಿ ಮತ್ತೆ ಮೂಡಿಬಂದ ಎನ್ನುವಂತಾಗಿತ್ತು. ಉರ್ದು ವಾತೆ೯ಯ ಹೋರಾಟ ಕಾವೇರಿ ನೀರಿಗಾಗಿ ನಡೆದ ಹೋರಾಟ ಒಂದೇ ಎರಡೇ.

ಗೆಳೆಯರೇ, ನಮ್ಮ ವೈಭವದ ದಿನಗಳು ಮರಳಿ ಬರುವಂತಾಗಲು ನಮ್ಮ ಮೇಲಿನ ದೌರ್ಜನ್ಯಗಳು ಕೊನೆಗೊಳ್ಳಲು ನಾವೀಗ ಸಂಘಟಿತರಾಗಿ ಹೋರಾಡಬೇಕಿದೆ ಇಂತಹ ಒಂದು ಸಂಘಟನೆಯು ಧೃಡ ಸಂಕಲ್ಪ, ನಿರ್ದಿಷ್ಟ ನಿಲುವು , ಬದ್ಧತೆ, ನಿಸ್ವಾರ್ಥತೆ, ಯೋಜನೆ , ಜನಬಲ, ಸತತ ಪ್ರಯತ್ನಗಳಿಂದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ನಾಡಜನರನ್ನು ಒಗ್ಗೂಡಿಸುವ ಶಕ್ತಿ ಹೊಂದಿರಬೇಕಾಗಿದೆ ಇಂದಿನ ಪರಿಸ್ಥಿತಿಯಲ್ಲಿ ಅಂತಹ ಶಕ್ತಿ , ಯೋಚನೆ, ಯೋಗ್ಯತೆಗಳಿರುವುದು, ಕರ್ನಾಟಕ ರಕ್ಷಾಣಾ ವೇದಿಕೆಗೆ ಮಾತ್ರ. ನಿಷ್ಠೆ, ನಿಸ್ವಾರ್ಥತೆ, ಉನ್ನತ ಮೌಲ್ಯಗಳ ಜೊತೆಗೆ ಇರುವುದು ಧೈರ್ಯ, ಸಾಹಸ, ಕೆಚ್ಚು, ಗುರಿ ಈಡೇರಿಕೆಗೆ ಪ್ರಾಣತ್ಯಾಗಕ್ಕೂ ಸಿದ್ಧವಾಗಿ.
ನಾವೆಲ್ಲಾ ಸಂಘಟಿತರಾಗುವುದರಲ್ಲೇ ನಮ್ಮ ಭವಿಷ್ಯವಿದೆ. ಎಂಬ ಅರಿವಿನಿಂದ ಕನ್ನಡಿಗರನ್ನು ಸಂಘಟಿಸಬೇಕು. ಅಲ್ಲಿಗೆ ನಮ್ಮ ಹಿರಿಯರು ಕಂಡ ಸುವರ್ಣ ಕರ್ನಾಟಕದ ಕನಸು ನನಸಾಗುತ್ತದೆ. ರಾಷ್ಟಕವಿ ಕುವೆಂಪು ನುಡಿದಂತೆ.. . .
ಕರ್ನಾಟಕವೆಂದರೇನು? ಹೆಸರೇ ಬರಿಯ ಮಣ್ಣಿಗೆ? ಮಂತ್ರ ಕಣಾ, ಶಕ್ತಿ ಕಣಾ, ತಾಯಿ ಕಣಾ, ದೇವಿ ಕಣಾ, ಬೆಂಕಿ ಕಣಾ, ಸಿಡಿಲು ಕಣಾ, . . .

ಸಿರಿಗನ್ನಡಂ ಗಲ್ಗೆ ಸಿರಿಗನ್ನಡಂ ಬಾಳ್ಗೆ